Total Pageviews

Friday, December 7, 2012

ರೂಪರೂಪಗಳನು ದಾಟಿ...

ಕನ್ನಡ ರಂಗಭೂಮಿ ಮತ್ತೆ ಕ್ರಿಯಾಶೀಲವಾಗತೊಡಗಿದೆ. ಅದು ಹೊಸ ಪ್ರಯೋಗಗಳತ್ತ ಮುಖ ಮಾಡಿದೆ.
ಕಳೆದ ವರ್ಷಾಂತ್ಯದಲ್ಲಿ ಪ್ರಸನ್ನ ಷೇಕ್ಸ್ ಪಿಯರನ ’ಹ್ಯಾಮ್ಲೆಟ್’ ನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದರು. ಅಷ್ಟೇ ಯಶಸ್ವಿಯಾಗಿ ರಂಗದ ಮೇಲೆಯೂ ತಂದರು. ಒಬ್ಬ ನಾಟಕಕಾರನೇ ನಿರ್ದೇಶಕನೂ ಆದಾಗ ರಂಗ ಪ್ರಯೋಗದಲ್ಲಿ ಏನೇನು ಅನುಕೂಲತೆಗಳು ಆಗಬಹುದೋ ಅದೆಲ್ಲವೂ ಈ ಪ್ರಯೋಗದಲ್ಲಿ ಆಗಿತ್ತು. ಪ್ರಸನ್ನ ರಂಗಾಯಣ್ದ ನಿರ್ದೇಶಕರಾಗಿದ್ದಾಗ ಕೈಗೆತ್ತಿಕೊಂಡ ನಾಟಕವಿದು. ಮೈಸೂರಿನ ರಂಗಾಯಣ ತಂಡವೇ ಇದನ್ನು ಆಡಿತ್ತು.

ಆದಾದ ನಂತರ ಅಂತಹದೇ ಮಹತ್ವದ ಪ್ರಯೋಗವೊಂದು ಇದೇ ಸೆಪ್ಟಂಬರ್ ತಿಂಗಳ ಆದಿಯಲ್ಲಿ ನಡೆಯಿತು. ಅದು ಶಿವರಾಮ ಕಾರಂತರ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ’ ಮೂಕಜ್ಜಿಯ ಕನಸುಗಳು’ ರಂಗವನ್ನು ಏರಿದ್ದು. ಬೆಂಗಳೂರಿನ ’ಕಲಾಗಂಗೋತ್ರಿ’ ತಂಡ ಇದನ್ನು ಅಭಿನಯಿಸಿತ್ತು. ಡಾ. ಬಿ.ವಿ.ರಾಜಾರಂ ನಿರ್ದೇಶಿಸಿದ ಈ ನಾಟಕವನ್ನು ಎಸ್. ರಾಮಮೂರ್ತಿ ರಂಗ ರೂಪಾಂತರಗೊಳಿಸಿದ್ದರು.

ಇದರ ಬೆನ್ನಲ್ಲೇ ರಾಷ್ಟ್ರಕವಿ ಕುವೆಂಪು ಅವರ ’ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿ, ನಾಟಕವಾಗಿ ರಂಗಾಸಕ್ತರನ್ನು ವಿಸ್ಮಯಗೊಳಿಸಿತ್ತು. ಯಾಕೆಂದರೆ ಸುಮಾರು ಎಂಟುನೂರ ಐವತ್ತು ಪುಟಗಳ ಈ ಬೃಹತ್ ಕಾದಂಬರಿಯನ್ನು ನಾಟಕದಂತಹ ಪ್ರದರ್ಶನ ಕಲೆಯ ಚೌಕಟ್ಟಿಗೊಳಪಡಿಸುವುದು ಕಷ್ಟದ ಕೆಲಸವಾಗಿತ್ತು. ಅದನ್ನು ’ನಟರಂಗ’ ತಂಡದ ಶಶಿಧರ್ ಭಾರಿಘಾಟ್ ಮಾಡಿದ್ದರು. ಮೂಕಜ್ಜಿಯ ಕನಸುಗಳನ್ನು ಯಶಸ್ವಿಯಾಗಿ ರಂಗರೂಪಕ್ಕಿಳಿಸಿದ ಎಸ್. ರಾಮಮೂರ್ತಿಯವರು ಇಲ್ಲಿ ಅಷ್ಟೇನೂ ಯಶಸ್ಸು ಸಾಧಿಸಲಾಗಲಿಲ್ಲ. ನಾಟಕ ಒಂದು ಒಳ್ಳೆಯ ಪ್ರಾಮಾಣಿಕ ಪ್ರಯತ್ನವಾಗಿ ಉಳಿಯಿತು.

ಈ ನಡುವೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾದಂಬರಿಯನ್ನಾಧರಿಸಿದ ’ಇಗೋ ಪಂಜರ ಅಗೋ ಮುಗಿಲು’ ಎಂಬ ನಾಟಕ ಅಗಸ್ಟ್ ೧೪ರ ಮಧ್ಯರಾತ್ರಿ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿದೆ. ಕವಿ ಎಲ್.ಎನ್.ಮುಕುಂದರಾಜ್ ಇದನ್ನು ರಂಗರೂಪಾಂತರಗೊಳಿಸಿದ್ದರು. ಸಿ.ಜಿ.ಕೆ ಇದರ ನಿರ್ದೇಶಕರು. ಅದ್ಧೂರಿ ಪ್ರಚಾರದೊಂದಿಗೆ ಅದ್ಧೂರಿ ಪ್ರಯೋಗ ಕಂಡ ಈ ನಾಟಕ ಅಂತಹ ಮಹತ್ವದ ಯಶಸ್ಸನ್ನೇನೂ ಕಾಣಲಿಲ್ಲ.

ಮೇಲಿನ ಎಲ್ಲಾ ನಾಟಕಗಳು ಒಂದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡವು. ರಂಗಪ್ರೇಮಿಗಳು ರಂಗಭೂಮಿಯಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳನ್ನು ಈ ಪ್ರದರ್ಶನಗಳು ಸುಳ್ಳು ಮಾಡಿದವು. ಜನ ದುಡ್ಡು ಕೊಟ್ಟು ಈ ನಾಟಕಗಳನ್ನು ನೋಡಿದರು.

ಈಗ ನಗರದ ಇನ್ನೊಂದು ಪ್ರಮುಖ ತಂಡ ’ಬೆನಕ’-ಬಿ.ವಿ.ಕಾರಂತರು ಇದರ ಬೆನ್ನೆಲುಬಾಗಿದ್ದರು- ಜಯಂತ ಕಾಯ್ಕಿಣಿಯವರ ಕಥೆಗಳನ್ನು ಆಧರಿಸಿದ ಹೊಸ ನಾಟಕ ’ ಆಕಾಶ ಬುಟ್ಟಿ’ಯನ್ನು ಕೈಗೆತ್ತಿಕೊಂಡಿದೆ. ಅಕ್ಟೋಬರ್ ೧೨ ಮತ್ತು ೨೩ರಂದು ಎ.ಡಿ.ಎ ರಂಗಮಂದಿರದಲ್ಲಿ ಇದರ ಪ್ರದರ್ಶನ. [ರವೀಂದ್ರ ಕಲಾಕ್ಷೇತ್ರ ದುರಸ್ತಿಯಲ್ಲಿದೆ] ಸಿ. ಬಸವಲಿಂಗಯ್ಯ ಇದರ ನಿರ್ದೇಶಕರು.

ಹೀಗೆ ನವ್ಯ ಕನ್ನಡ ರಂಗಭೂಮಿ ಜಡತ್ವವನ್ನು ಕೊಡವಿಕೊಂಡು ಹೊಸ ಸಾಧ್ಯತೆಗಳತ್ತ ಮುಖ ಮಾಡುತ್ತಿದೆ. ಕನ್ನಡದಲ್ಲಿ ನಾಟಕಗಳ ಕೊರತೆಯಿದೆ ಎಂಬುದು ಹಳೆಯ ಕೊರಗು. ಇದು ಬಹುಮಟ್ಟಿಗೆ ನಿಜ ಕೂಡಾ. ನಾಟಕ ಬರೆಯುವುದಕ್ಕೆ ಸಾಹಿತಿಯೊಬ್ಬನ ಮನಸ್ಸು ಪಕ್ವಗೊಳ್ಳಬೇಕು. ಪರಿಣತಿ ಬೇಕು ಹಿಂದಿನ ಬರಹಗಾರರಿಗೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಅರಿವಿದ್ದು ತಕ್ಕ ಮಟ್ಟಿಗೆ ಅದರಲ್ಲಿ ಕೃಷಿ ಮಾಡಿ ಕೊನೆಗೆ ನಾಟಕ ಬರೆಯುತ್ತಿದ್ದರು. ನಾಟಕ ಬರೆಯುವುದು ಕಷ್ಟದ ಕೆಲಸ. ಆದರೆ ಈಗ ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಹಾಗೆ ಬಹುತೇಕ ಮಂದಿ ನಾಟಕ ಬರೆಯುವುದು ಬಹಳ ಸುಲಭ ಅಂದುಕೊಂಡಿದ್ದಾರೆ. ಹಾಗಾಗಿ ನಾಟಕದ ಆಳ ಮತ್ತು ಅರ್ಥವಿಸ್ತಾರ ಕಾಣೆಯಾಗತೊಡಗಿದೆ.

ಹಾಗಾಗಿ ಏನೋ ಒಳ್ಳೆಯ ನಾಟಕಗಳನ್ನು ಆಡಬೇಕೆಂದು ಬಯಸುವವರು ಹಳೆ ನಾಟಕಗಳತಲೇ ಮುಖ ಮಾಡಬೇಕಾಗಿದೆ. ಅಥವಾ ಹಳೇ ತಂಡಗಳೇ ಹೊಸ ಕಲಾವಿದರನ್ನು ಹಾಕಿಕೊಂಡು ಪುನರ್ ಪ್ರದರ್ಶನ ಮಾಡುತ್ತವೆ. ನಾಟಕಗಳಿಗೆ ಪ್ರೇಕ್ಷಕರು ಬರದೇ ಇರುವುದಕ್ಕೆ ಇದೂ ಒಂದು ಕಾರಣವಿದ್ದಿರಬಹುದು.

ಆದರೆ ಹಿಂದೆ ಹೇಳಿದ ಕಾದಂಬರಿ ಆಧಾರಿತ ರಂಗಪ್ರಯೋಗಗಳನ್ನು ಜನ ಮುಗಿಬಿದ್ದು ನೋಡಿದರು. ದುಬಾರಿ ಟಿಕೇಟ್ ಇದ್ದರೂ ಪ್ರೇಕ್ಷಕರು ಕಿಕ್ಕಿರಿದಿದ್ದರು. ಕಲಾಕ್ಷೇತ್ರದಲ್ಲಿ ಹೊಸ ಮುಖಗಳು ಕಂಡವು. ತಮ್ಮ ನಾಟಕ ಜನರನ್ನು ತಲುಪಬೇಕೆಂಬ ಇರಾದೆಯುಳ್ಳವರು ಈಗ ಕಾದಂಬರಿ, ಸಣ್ಣಕಥೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿಯನ್ನಂತೂ ಮೇಲಿನ ನಾಟಕಗಳು ಸೃಷ್ಟಿಸಿವೆ.
ರಾಜಧಾನಿಯಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಹಲವು ಅನುಕೂಲತೆಗಳುಂಟು. ರಂಗಭೂಮಿಗೆ ಸಂಬಂಧಪಟ್ಟಂತೆ ಹೆಚ್ಚಿನ ಪ್ರಮಾಣದಲ್ಲಿ ವಿಚಾರಸಂಕಿರಣಗಳು, ಕಮ್ಮಟಗಳು, ಚರ್ಚೆ-ಸಂವಾದಗಳು ಇಲ್ಲಿ ನಡೆಯುತ್ತಿರುತ್ತವೆ. ಇಲ್ಲಿ ಕಲಾಕ್ಷೇತ್ರದಂತಹ ಸುಸಜ್ಜಿತ ರಂಗಮಂದಿರವಿದೆ. ಇಲ್ಲಿ ಪ್ರದರ್ಶನ ಕೊಡಬೇಕೆಂಬುದು ಎಲ್ಲಾ ರಂಗತಂಡಗಳ ಕನಸು. ಆದರೆ ಇದು ಜಿಲ್ಲಾಮಟ್ಟದ ಹಾಗೂ ಗ್ರಾಮಾಂತರ ಮಟ್ಟದ ತಂಡಗಳಿಗೆ ಸುಲಭದಲ್ಲಿ ಈಡೇರುವ ಕನಸಲ್ಲ.

ಆರ್. ನಾಗೇಶ್ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ’ತಿಂಗಳ ನಾಟಕ’ವೆಂಬ ಮಾಲಿಕೆಯನ್ನು ಪ್ರಾರಂಭಿಸಿದ್ದರು. ಅದರಲ್ಲಿ ರಾಜಧಾನಿಯೇತರ ತಂಡಗಳಿಗೆ ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ನಾಟಕ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದರು. ಹಾಗಾಗಿ ಹೊರಗಿನ ಉತ್ತಮ ನಾಟಕಗಳನ್ನು ನೋಡುವ ಅವಕಾಶ ಬೆಂಗಳೂರಿನ ರಂಗಾಸಕ್ತರಿಗೆ ಒದಗಿ ಬಂದಿತ್ತು.

ಬೇರೆ ಬೇರೆ ತಂಡದವರು ಒಂದೇ ನಾಟಕವನ್ನು ಆಡಿದಾಗ ಅದನ್ನು ಅಕ್ಕ-ಪಕ್ಕದಲ್ಲಿಟ್ಟು ತೂಗಿ ನೋಡುವ ಅವಕಾಶವೂ ಸಿಕ್ಕಿತ್ತು. ಕಳೆದ ಮೇ ತಿಂಗಳ ಮಾಲಿಕೆಯಲ್ಲಿ ಮಂಗಳೂರಿನ ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಸ್ತುತಪಡಿಸಿದ ’ಕೋರ್ಟ್ ಮಾರ್ಷಲ್’ ನಾಟಕದ ಮರುದಿನವೇ ಅದೇ ನಾಟಕವನ್ನು ಸಿ.ಆರ್.ಸಿಂಹ ನೇತೃತ್ವದ ವೇದಿಕೆ ತಂಡ ಪ್ರದರ್ಶಿಸಿತ್ತು. ಹಿಂದಿಯಲ್ಲಿ ಸ್ವದೇಶ್ ದೀಪಕ್ ರಚಿಸಿದ ಈ ನಾಟಕವನ್ನು ಕನ್ನಡಕ್ಕೆ ತಂದವರು ಸಿದ್ಧಲಿಂಗ ಪಟ್ಟಣಶೆಟ್ಟಿ.. ಎರಡೂ ತಂಡಗಳು ಪೈಪೋಟಿ ನೀಡುವ ರೀತಿಯಲ್ಲಿ ಅಭಿನಯಿಸಿದ್ದರೂ ಸದಾನಂದ ಸುವರ್ಣರ ನಿರ್ದೇಶನವೇ ಮೇಲುಗೈ ಸಾಧಿಸಿತ್ತು.

ಇದೇ ಮಾಲಿಕೆಯಲ್ಲಿ ಧಾರವಾಡದ ಜಯತೀರ್ಥ ಜೋಷಿಯವರ ’ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ’ವನ್ನು [ ರಚನೆ; ಚಂದ್ರಶೇಖರ ಕಂಬಾರ ] ಬೆಂಗಳೂರಿನ ಪ್ರೇಕ್ಷಕರು ನೋಡಿದರು. ಸಮಸ್ತ ನವ್ಯ ಸಾಹಿತ್ಯದ ಸಾರ ಸಂಗ್ರಹದಂತಿರುವ ’ ಭೂಮಿಗೀತ’ ವನ್ನು [ಗೋಪಾಲಕೃಷ್ಣ ಅಡಿಗರ ಸುಪ್ರಸಿದ್ಧ ಕವನ] ರಂಗಕ್ಕೆ ತಂದ ಉತ್ಸಾಹಿ ರಂಗಕರ್ಮಿ ಅವರು. ರಾಜಧಾನಿಯ ರಂಗ ಚಟುವಟಿಕೆಗಳಿಗೆ ಸಮಬಲವಾಗಿ ಉತ್ತರ ಕರ್ನಾಟಕದ ರಂಗಭೂಮಿಯನ್ನು ಕ್ರಿಯಾಶೀಲಗೊಳಿಸಿದವರು ಜೋಷಿ. ಕಳೆದ ವರ್ಷ ನವೆಂಬರ್ ೧೬ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ’ ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ ನೋಡುತ್ತಿರುವಾಗಲೇ ಅವರು ಹೃದಯಾಘಾತದಿಂದ ತೀರಿಕೊಂಡ ಸುದ್ದಿ ಕಲಾಕ್ಷೇತ್ರಕ್ಕೆ ಬಂದು ಒಂದು ಕ್ಷಣ ಪ್ರೇಕ್ಷಕರ ಎದೆಯೂ ಮ್ಲಾನಗೊಂಡಿತ್ತು.

ಇದೇ ಮಾಲಿಕೆಯಲ್ಲಿ ಧಾರವಾಡದ ಅರುಣೋದಯದ ಹವ್ಯಾಸಿ ಕಲಾಸಂಘದಿಂದ ಕಂಬಾರರ ’ಮಹಾಮಾಯಿ’, ಶಿವಮೊಗ್ಗಾದ ಮೀಡಿಯಾ ತಂಡದವರು ಅಭಿನಯಿಸಿದ ಬಿ.ಚಂದ್ರಗೌಡರ ’ಕಡಿದಾಳ ಶಾಮಣ್ಣ’ ನಾಟಕ ಪ್ರದರ್ಶಿಸಲ್ಪಟ್ಟಿತ್ತು. ಎಲ್ಲಾ ನಾಟಕಗಳ ನೆನಪು ಬಾರದಿದ್ದರೂ ರಾಜಧಾನಿಯಲ್ಲಿ ಕುಳಿತ ನಮಗೆ ಹೆಗ್ಗೋಡಿನ ನೀನಾಸಂ ತಿರುಗಾಟ ಮತ್ತು ಮೈಸೂರಿನ ರಂಗಾಯಣದ ಹೊರತಾಗಿತೂ ಹೊರಗಿನ ಗ್ರಾಮೀಣ ಮಟ್ಟದ ಕೆಲವು ನಾಟಕಗಳನ್ನು ನೋಡುವ ಅವಕಾಶ ಸಿಕ್ಕಿತ್ತು.

ತಿಂಗಳ ಮಾಲಿಕೆಯಿಂದ ಆದ ಇನ್ನೊಂದು ಉಪಯೋಗವೆಂದರೆ ಒಂದೆರಡು ಒಳ್ಳೆಯ ವೃತ್ತಿ ನಾಟಕಗಳನ್ನು ನೋಡಲು ಸಾಧ್ಯವಾಗಿದ್ದು.ಪೆಭ್ರವರಿಯಲ್ಲಿ ಧಾರವಾಡದ ಕಲಬುರ್ಗಿ ಶರಣಬಸವೇಶ್ವರ ಕೃಪಾಪೋಷಿತ ನಾಟ್ಯಸಂಘದಿಂದ ’ಬಸ್ ಕಂಡಕ್ಟರ್’ ಮತ್ತು ಇಳಕಲ್ಲಿನ ಹವ್ಯಾಸಿ ರಂಗತಂಡ ಸ್ನೇಹ ರಂಗದಿಂದ ಪಿ.ಬಿ. ಧುತ್ತರಗಿಯವರ ’ಸಂಪತ್ತಿಗೆ ಸವಾಲ್’ ನಾಟಕಗಳು ಪ್ರದರ್ಶನಗೊಂಡವು.

ರವೀಂದ್ರ ಕಲಾಕ್ಷೇತ್ರದಲ್ಲಿ ಹವ್ಯಾಸಿ ನಾಟಕಗಳೇ. ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ. ಇಲ್ಲಿಗೆ ಬರುವ ಪ್ರೇಕ್ಷಕರಿಗೆ ವೃತ್ತಿ ರಂಗಭೂಮಿಯ ನಾಟಕಗಳನ್ನು ನೋಡಿ ಆನಂದಿಸುವ ಮನಸ್ಥಿತಿ ಸಾಮಾನ್ಯವಾಗಿ ಇರುವುದಿಲ್ಲ. ಆದರೂ ಅಂಥವರೂ ಈ ನಾಟಕಗಳನ್ನು ನೋಡಿ ಖುಷಿ ಪಟ್ಟರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಹಾಸ್ಯ ನಾಟಕಗಳು, ಹಾಸ್ಯೋತ್ಸವಗಳು ಜನರನ್ನು ತಮ್ಮೆಡೆಗೆ ಸೆಳೆಯುತ್ತಲಿವೆ. ಹುಬ್ಬಳ್ಳಿಯ ಗುರು ಸಂಸ್ಥೆ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ನಡುವೆ ಸೇತುವೆಯಾಗಿ ತನ್ನ ನಾಟಗಳನ್ನು ಪ್ರದರ್ಶಿಸುತ್ತಿದೆ. ಅವರ ’ಆಲ್ ದಿ ಬೆಸ್ಟ್’ ಮತ್ತು ’ಸಹಿ ರಿ ಸಹಿ’ ಈಗಾಗಲೇ ನೂರಾರು ಪ್ರದರ್ಶನಗಳನ್ನು ಕಂಡಿದೆ.

ಇಷ್ಟೆಲ್ಲಾ ರಂಗಚಟುವಟಿಕೆಗಳು ನಡೆದರೂ ಕಲಾಕ್ಷೇತ್ರ ತುಂಬುವುದು ಅಪರೂಪ. ಬೆಂಗಳೂರಿನಲ್ಲೇ ಕನಿಷ್ಟ ೧೫೦ ರಂಗತಂಡಗಳಿವೆ. ಒಂದು ರಂಗತಂಡ ನಾಟಕ ಪ್ರದರ್ಶನ ನೀಡುತ್ತಲಿದ್ದರೆ ಇನ್ನೊಂದು ತಂಡದವ್ರು ಅಲ್ಲೇ ಕಲಾಕ್ಷೇತ್ರದ ಮೆಟ್ಟಲುಗಳ ಮೇಲೆ ಹರಟೆ ಹೊಡೆಯುತ್ತಾ ಕುತಿರುತ್ತಾರೆಯೇ ಹೊರತು ಕುತೂಹಲಕ್ಕಾದರೂ ರಂಗಮಂದಿರದ ಒಳಗೆ ಇಣುಕಿ ನೋಡುವುದಿಲ್ಲ.
ಮಕ್ಕಳ ರಂಗಭೂಮಿ ಕೂಡಾ ಬೆಂಗಳೂರಿನಲ್ಲಿ ಸಾಕಷ್ಟು ಕ್ರಿಯಾಶೀಲವಾಗಿದೆ. ಆದರೆ ನಮ್ಮ ಗಮನಕ್ಕೆ ಬಂದಂತೆ ಗ್ರಾಮಾಂತರ ಮಟ್ಟದಲ್ಲಿ ಮಕ್ಕಳ ರಂಗಭೂಮಿ ಇನ್ನೂ ಹೆಚ್ಚು ಕ್ರಿಯಾಶೀಲವಾಗಿದೆ.

ರಂಗಭೂಮಿಯಂತಹ ಸಶಕ್ತ ಮಾಧ್ಯಮವನ್ನು ಇತ್ತೀಚೆಗಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮ ಕಡೆಗಣಿಸಿದೆಯೇನೋ ಎಂದು ಭಾಸವಾಗುತ್ತಿದೆ. ಕನ್ನಡದ ನಿಯತಕಾಲಿಕಗಳು, ಸಾಹಿತ್ಯ ಪತ್ರಿಕೆಗಳು ರಂಗಭೂಮಿಯ ಬಗ್ಗೆ ಗಂಭೀರವಾಗಿ ಬರೆಯುವುದನ್ನೇ ನಿಲ್ಲಿಸಿಬಿಟ್ಟಿವೆ. ರಂಗಭೂಮಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವವರು, ಆಳವಾದ ಜ್ನಾನ ಹೊಂದಿರುವವರುಪತ್ರಿಕೆಗಳಿಗೆ ಬರೆಯುತ್ತಿಲ್ಲ. ಮಹತ್ವದ ಪ್ರಯೋಗಗಳಾದಾಗ ಅದನ್ನು ರಾಜ್ಯಮಟ್ಟದ ಸುದ್ದಿಯಾಗಿಸುವುದು ಮುಖ್ಯ. ಆದರೆ ರಾಜಧಾನಿಯಿಂದ ಹೊರಡುವ ಪತ್ರಿಕೆಗಳು ಅದನ್ನು ಕೇವಲ ತಮ್ಮ ಪುಲ್ ಔಟ್ ಗಳಿಗೇ ಸೀಮಿತಗೊಳಿಸುತ್ತವೆ.

ಇನ್ನು ಗ್ರಾಮೀಣ ರಂಗಭೂಮಿಯಲ್ಲಿನ ಚಟುವಟಿಗಳು ಪ್ರಾದೇಶಿಕ ಪುಲ್ ಔಟ್ ಗಳಿಗಷ್ಟೇ ಸೀಮಿತವಾಗಿದೆ. ಹಾಗಾಗಿ ರಾಜಧಾನಿ ಮತ್ತು ಗ್ರಾಮೀಣ ಪ್ರದೇಶದ ರಂಗ ಚಟುವಟಿಕೆಗಳ ಮಧ್ಯೆ ಒಂದು ರೀತಿಯ ಶೂನ್ಯ ಆವರಿಸಿದೆ. ಹಿಂದೆಲ್ಲಾ ಇದನ್ನು ತುಂಬುವ ಕೆಲಸವನ್ನು ಪತ್ರಿಕೆಗಳು, ವಿಮರ್ಶಕರು ಮಾಡುತ್ತಿದ್ದರು. ಇಂದು ಬರುತ್ತಿರುವ ಅನೇಕ ವಿಮರ್ಶೆಗಳು ಬರೀ ಕಥೆ ಹೇಳುವುದಕ್ಕೆ ಇಲ್ಲವೇ ಲಾಬಿ ಮಾಡುವುದಕ್ಕಷ್ಟೇ ಸೀಮಿತವಾಗಿದೆ.

ಹಾಗಾಗಿಯೇ ಏನೋ ರಂಗಭೂಮಿಯನ್ನು ಗಂಭೀರವಾಗಿ ತೆಗೆದುಕೊಂಡವರು ತಮ್ಮಷ್ಟಕ್ಕೇ ತಾವೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರಚಾರದ ಯಾವ ಹಂಗೂ ಬೇಕಾಗಿಲ್ಲ. ಆದರೆ ರಾಜಧಾನಿಯಲ್ಲಿರುವವರು ಪ್ರಚಾರದ ಹಂಗಿಲ್ಲದೆ ಒಂದು ಹುಲ್ಲು ಕಡ್ಡಿಯನ್ನೂ ಎತ್ತಿಡಲಾರರು.

[ ೨೦೦೪ ರಲ್ಲಿ ’ ಹಂಗಾಮ’ ನಿಯತಕಾಲಿಕಕ್ಕಾಗಿ ಬರೆದ ಲೇಖನ]

Sunday, December 2, 2012

ವಿಶ್ವಾಮಿತ್ರನ ’ದೃಷ್ಟಿ’ಯಲ್ಲಿ ಹುಟ್ಟಿಕೊಂಡ ಪ್ರಶ್ನೆಗಳು...

ನಮ್ಮ ಪುರಾಣದ ಮುನಿಶ್ರೇಷ್ಟರಲ್ಲಿ ವಿಶ್ವಾಮಿತ್ರನಂಥ ರೆಬೆಲ್ ಮುನಿ ಇನ್ನೊಬ್ಬನಿಲ್ಲ. ಆತನದು ವರ್ಣರಂಜಿತ ವ್ಯಕ್ತಿತ್ವ. ಹುಟ್ಟಿದ್ದು ಕ್ಷತ್ರಿಯ ಕುಲದಲ್ಲಿ; ಆದರೆ ಆಸೆ ಪಟ್ಟಿದ್ದು ಬ್ರಹ್ಮರ್ಷಿ ಪದವಿಗೆ. ಅತನ ದೃಷ್ಟಿ ಹೊರಳಿದೆಡೆಯಲೆಲ್ಲ ಏನಾದರೊಂದು ಅದ್ಭುತ ಘಟಿಸುತ್ತಿತ್ತು.

ವಶಿಷ್ಟನ ಆಶ್ರಮದಲ್ಲಿ ಕಾಮಧೇನುವನ್ನು ಕಂಡ. ಅದಕ್ಕಾಗಿ ಆಸೆಪಟ್ಟ. ಸಿಗಲಿಲ್ಲ. ತಪಸ್ಸಿಗೆ ಕೂತ. ಯಾವ್ಯಾವುದಕ್ಕೋ ಆಸೆಪಡುತ್ತಲೇ ಹೋದ....ಮೇನಕೆಯನ್ನು ಸೇರಿ ಶಕುಂತಲೆಯನ್ನು ಪಡೆದ. ಹಸಿವೆಯನ್ನು ತಾಳಲಾರದೆ ಚಂಡಾಲ ಗೃಹ ಹೊಖ್ಖು ನಾಯಿ ಮಾಂಸ ತಿಂದ.

ಚೌಕಟ್ಟುಗಳನ್ನು ಮೀರುತ್ತಲೇ ಹೋದ. ತ್ರಿಶಂಕುವಿಗಾಗಿ ಪ್ರತಿ ಸ್ವರ್ಗವನ್ನೇ ಸೃಷ್ಟಿಸಿದ. ಇಲ್ಲೊಂದು ಐರನಿ ಇದೆ.
ಸೂರ್ಯವಂಶದ ಕುಲಗುರು ವಶಿಷ್ಠ. ಆತ ತನ್ನ ರಾಜನಾದ ತ್ರಿಶಂಕುವನ್ನು ಸಶರೀರನಾಗಿ ಸ್ವರ್ಗಕ್ಕೆ ಕಳುಹಿಸಲು ನಿರಾಕರಿಸುತ್ತಾನೆ. ಆಗ ತ್ರಿಶಂಕು ಮೊರೆ ಹೊಕ್ಕಿದ್ದು ವಶಿಷ್ಠನ ಎದುರಾಳಿಯಾದ ವಿಶ್ವಾಮಿತ್ರನನ್ನು. ಅದೇ ತ್ರಿಶಂಕುವಿನ ಮಗನಾದ ಹರಿಶ್ಚಂದ್ರನ ಮಗ ರೋಹಿತನಿಗೆ ವರುಣನ ಶಾಪದಿಂದಾಗಿ ಜಲೋದರ ರೋಗ ಆವರಿಸಿದಾಗ ಅದಕ್ಕೆ ಶಮನದ ಹಾದಿಯನ್ನು ವಶಿಷ್ಠ ತೋರಿಸುವುದಿಲ್ಲ. ಆಗ ರಕ್ಷಣೆಗೆ ಬಂದಿದ್ದು ಇದೇ ವಿಶ್ವಾಮಿತ್ರ.

ತನಗೆ ಪುತ್ರ ಸಂತಾನವಾದರೆ ಆ ಮಗುವನ್ನು ನಿನಗೆ ಕೊಡುತ್ತೇನೆ ಎಂದು ಹರಕೆ ಹೊತ್ತ ಫಲವಾಗಿ ಹರಿಶ್ಚಂದ್ರನಿಗೆ ಲೋಹಿತಾಶ್ವ ಜನಿಸುತ್ತಾನೆ. ಆದರೆ ಮಗನ ಮೇಲಿನ ಮೋಹದಿಂದಾಗಿ ಮಾತಿಗೆ ತಪ್ಪುತ್ತಾನೆ.  ಜಲೋದರ ರೋಗ ಆವರಿಸುತ್ತದೆ. ಆಗ ಅಜಿತಗರ್ಭನ [ಆತನ ಇನ್ನೊಂದು ಹೆಸರು ರುಚಿಕ] ಮಧ್ಯಮ ಪುತ್ರನಾದ ಶ್ಯುನಶೇಫನನ್ನು ಖರೀದಿಸಿ ತಂದು ವರುಣನಿಗೆ ಬಲಿ ಕೊಡುವ ಪ್ರಯತ್ನ ನಡೆಯುತ್ತದೆ. ಇದು ಎಷ್ಟ್ರರ ಮಟ್ಟಿಗೆ ಸರಿ? ಯಜ್ನಹೋತೃ ವಿಶ್ವಾಮಿತ್ರ ಮತ್ತು ಅವರ ಮಕ್ಕಳ ಅಭಿಪ್ರಾಯ ಬೇಧ ಏನು? ವರುಣನ ಕೃಪೆಯಿಂದ ಬದುಕುಳಿದವನು ಯಾರಿಗೆ ಸೇರಿದವನು? ಅವನ ಗೋತ್ರ ಯಾವುದು? ವಿಶ್ವಾಮಿತ್ರ ಆತನನ್ನು ತನ್ನ ಮಗನಾಗಿ ಅಂಗೀಕರಿಸಿದಾಗ ಉಂಟಾದ ಧರ್ಮದ ತೊಡಕುಗಳಾವುವು?...ಮುಂತಾದ ಪ್ರಶ್ನೆಗಳಿಗೆಲ್ಲಾ ಉತ್ತರಿಸುವ ಪ್ರಯತ್ನ ಮಾಡುವ ನಾಟಕವೇ ’ದೃಷ್ಟಿ’

ಬೈಂದೂರಿನ ಲಾವಣ್ಯ ರಂಗತಂಡದವರು ವೇಣುಗೋಪಾಲ ಕಾಸರಗೋಡು ಅವರ ಈ ನಾಟಕವನ್ನು ಯಶಸ್ವಿಯಾಗಿ ರಂಗದ ಮೇಲೆ ತಂದರು. ನಾಟಕ ಅಕಾಡಮಿಯ ಹಿಂದಿನ ಅಧ್ಯಕ್ಷರಾದ ಆರ್. ನಾಗೇಶ್ ಅವರು ಮೂರು ವರ್ಷಗಳ ಹಿಂದೆ ’ತಿಂಗಳ ನಾಟಕ’ವೆಂಬ ಮಾಲಿಕೆಯನ್ನು ಆರಂಭಿಸಿದ್ದರು. ಹೊರಊರುಗಳಿಂದ ರಾಜಧಾನಿಗೆ ಬಂದ ರಂಗತಂಡಗಳು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದರು. ಇದೊಂದು ವಿಶಿಷ್ಟ ಪ್ರಯೋಗ. ’ದೃಷ್ಟಿ ಕೂಡಾ ತಿಂಗಳ ನಾಟಕ ಮಾಲಿಕೆಯಲ್ಲಿ ಪ್ರದರ್ಶಿತವಾಗುತ್ತದೆ ಎಂದು ಪ್ರಚುರಪಡಿಸಲಾಗಿತ್ತು. ಆದರೆ ಅದು ತಿಂಗಳ ನಾಟಕ ಮಾಲಿಕೆಯ ಮುಂದುವರಿಕೆಯೇ ಎಂಬುದು ಸ್ಪಷ್ಟವಾಗಲಿಲ್ಲ.

ಒಂದೂಕಾಲು ಘಂಟೆ ಅವಧಿಯಲ್ಲಿ ಈ ನಾಟಕದಲ್ಲಿ ಏಕ ಸೂತ್ರವಿತ್ತು. ಭಾಷಾಗಾಂಭೀರ್ಯವಿತ್ತು. ನಾಟಕದ ವಸ್ತು ಕೂಡಾ ತಾರ್ಕಿಕ ಸಂಭಾಷಣೆಯನ್ನೇ ಬೇಡುತ್ತಿತ್ತು. ಸಂಭಾಷಣೆಯಲ್ಲಿ ಇನ್ನೂ ಆಳ, ಮೊನಚು,ತರ್ಕ ಇದ್ದಿದ್ದರೆ ಉಸಿರು ಬಿಗಿ ಹಿಡಿದು ನೋಡಬಹುದಿತ್ತು.
ಸೀತಾರಾಮ ಶೆಟ್ಟಿ ಕೊರಾಡಿಯವರ ರಂಗವಿನ್ಯಾಸ, ಮತ್ತು ಬೆಳಕಿನಡಿ ವಿಶ್ವಾಮಿತ್ರದ ’ದೃಷ್ಟಿ’ಗೆ ಶ್ಯುನೇಶೇಫನ ತಂದೆ-ತಾಯಿಯರ ಸಂಭಾಷಣೆ ದೃಷ್ಟಿಬೊಟ್ಟಿನಂತೆ ಇತ್ತು. ಇಲ್ಲಿ ನಾಟಕ ಮುಗ್ಗರಿಸಿತು. ಶುನಸ್ಯೇಫ ಯಾರಿಗೆ ಸೇರಿದವನು ಎಂಬ ಧರ್ಮ ಜಿಜ್ನಾಸೆಯ ಸಭೆಯಲ್ಲಿ ಮುನಿಗಳನ್ನು ಎತ್ತರದಲ್ಲು ಕುಳ್ಳಿರಿಸಿ, ಅದಕ್ಕೆ ಬೆಳಕಿನ ವಿನ್ಯಾಸವನ್ನು ಮಾಡಿದ ರೀತಿ ಅದ್ಭುತವೆನಿಸಿತ್ತು. ಆದರೆ ನಾಟಕದುದ್ದಕ್ಕೂ ಬೆಳಕಿನ ವಿನ್ಯಾಸ ಪರಿಣಾಮಕಾರಿಯಾಗಿರಲಿಲ್ಲ. ಸ್ಪಾಟ್ ಲೈಟ್ ಬಳಸಿದ್ದರೆ ಪಾತ್ರಗಳ ವ್ಯಕ್ತಿತ್ವ ಹೆಚ್ಚು ಸ್ಫುಟಗೊಳ್ಳುತ್ತಿತ್ತೇನೋ!.

ನಾಟಕದ ಆರಂಭ ಮತ್ತು ಮುಂದುವರಿಕೆಗೆ ಋಷಿಗಳ ಮೇಳವನ್ನು ಉಪಯೋಗಿಸಿಕೊಂಡದ್ದು ಔಚಿತ್ಯಪೂರ್ಣವಾಗಿತ್ತು. ವಿಶ್ವಾಮಿತ್ರನಂಥ ವಿಶ್ವಾಮಿತ್ರನನ್ನೇ  ವಿರೋಧಿಸುವ ಮಗನಾಗಿ ಆಂದ್ರಕನ ಪಾತ್ರದಲ್ಲಿ ಬಿ. ಮೋಹನ ಕಾರಂತ್ ಗಮನ ಸೆಳೆದರು. ಶ್ಯುನಶೇಫನ ಅಭಿನಯ ಸಹಾ ಉಲ್ಲೇಖನೀಯ.

[ ೨೦೦೬ರಲ್ಲಿ ಉದಯವಾಣಿಯಲ್ಲಿ ಪ್ರಕಟವಾದ ಲೇಖನ ]