Total Pageviews

Friday, January 25, 2013

’ಡಿಯರ ಲಿಯರ”- ಶಿಖರ ಹತ್ತಿದ್ದಷ್ಟೆ ಅನುಭವ

ಚಿತ್ರ ಕೃಪೆ; ಅಂತರ್ಜಾಲ
’ ಡಿಯರ್ ಲಿಯರ್’ ರಂಗ ಪ್ರಯೋಗಕ್ಕೆ ಕೈ ಹಾಕಿದಾಗ ನನಗೆ ಅನ್ನಿಸಿದ್ದು ಆತ್ಮಹತ್ಯೆ ಅನಿವಾರ್ಯವಾದರೆ, ತೀರ ಎತ್ತರದ ಶಿಖರದಿಂದ ದುಮುಕೋಣ. ಕೊನೆಯ ಪಕ್ಷ ಹತ್ತಿದ ಅನುಭವಾದರೂ ದಕ್ಕುತ್ತದೆ.’

ಇದು ’ಡಿಯರ್ ಲಿಯರ್’ ನಾಟಕದ ನಿರ್ದೇಶಕ ಎಸ್.ಆರ್.ರಮೇಶ್ ತಮ್ಮ ನಾಟಕ ಪ್ರಯೋಗದ ಪುಸ್ತಿಕೆಯಲ್ಲಿ ಹೇಳಿಕೊಂಡ ಮಾತುಗಳು.
ಇದೇ ಹೋಲಿಕೆಯನ್ನು ಅವರು ಯಾಕೆ ಕೊಟ್ಟುಕೊಂಡ್ರೋ ಗೊತ್ತಿಲ್ಲ. ಆದರೆ ಶಿಖರ ಹತ್ತುವ ಪ್ರಯತ್ನವೊಂದು ಬಹುಮಟ್ಟಿಗೆ ಯಶಸ್ವಿಯಾಗಿದೆ.

ಮೈಸೂರಿನ ಹವ್ಯಾಸಿ ರಂಗಭೂಮಿಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ರಿಯಾಶೀಲವಾಗಿರುವ ’ ಪರಿವರ್ತನ’ ತಂಡ ಈ ನಾಟಕವನ್ನು ಅಭಿನಯಿಸಿತ್ತು.
ಕರ್ನಾಟಕ ನಾಟಕ ಅಕಾಡಮಿ ಹಮ್ಮಿಕೊಂಡು ಬಂದಿರುವ ತಿಂಗಳ ನಾಟಕ ಮಾಲಿಕೆಯಡಿ ಏಪ್ರೀಲ್ ತಿಂಗಳ ನಾಟಕವಾಗಿ ಎಚ್.ಎಸ್.ಶಿವಪ್ರಕಾಶ್ ಅನುವಾದಿಸಿರುವ ಷೇಕ್ಸ್ಪಿಯರ್ ನ ’ಕಿಂಗ್ ಲಿಯರ್’ ನಾಟಕ ’ ಡಿಯರ್ ಲಿಯರ್’ ಆಗಿ ಪ್ರಯೋಗಗೊಂಡಿತ್ತು.

ಷೇಕ್ಸ್ ಪಿಯರ್ ನ ’ಕಿಂಗ್ ಲಿಯರ್’ ಆತನ ಇತರ ದುರಂತ ನಾಟಕಗಳಂತೆ ಬಹು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ರಂಗಭೂಮಿಯಲ್ಲಿ ಪ್ರಯೋಗಗೊಂಡಿದ್ದು ವಿರಳ. ಕನ್ನಡ ರಂಗಭೂಮಿಗಂತೂ ಇದು ಹೊಸ ಪ್ರಯತ್ನವಾಗಿರಬೇಕು.
ಷೇಕ್ಸ್ ಪಿಯರ್ ನ ದುರಂತ ನಾಟಕಗಳಲ್ಲಿ ಕಥಾನಾಯಕರಿಗಿಂತ ಖಳನಾಯಕರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಇಲ್ಲಿ ಒಳಿತು ಕೆಡುಕುಗಳ ಸಮತೋಲನವಿರುತ್ತದೆ. ಮನುಷ್ಯಪ್ರಯತ್ನವನ್ನು ಮೀರಿದ ಘಟನೆಗಳು ಜರಗುತ್ತವೆ.

ಆದರೆ ಕಿಂಗ್ ಲಿಯರ್ ನಾಟಕದಲ್ಲಿ ಲಿಯರ್ ನಾಟಕದ ನಾಯಕನಾಗಿ, ಅದರಲ್ಲೂ ಅಸಂಗತ ನಾಯಕನಾಗಿ ಬಿಂಬಿತನಾಗುತ್ತಾನೆ.ತನ್ನ ರಾಜ್ಯವನ್ನು ಮೂವರು ಹೆಣ್ಣುಮಕ್ಕಳಿಗೆ ಸಮನಾಗಿ ಹಂಚಲು ನಿರ್ಧರಿಸಿ ’ನೀವು ನನ್ನನ್ನೆಷ್ಟು ಪ್ರೀತಿಸುತ್ತೀರಿ?’ ಎಂದು ಪ್ರಶ್ನೆ ಹಾಕಿ ಅವರಿಂದ ಉತ್ತರವನ್ನು ಪಡೆಯಬಯಸುತ್ತಾನೆ. ಮೊದಲ ಹೆಣ್ಣುಮಕ್ಕಳಾದ ಗಾನರಿಲ್ ಮತ್ತು ಲೀಗನ್ ತಮ್ಮ ಪ್ರೀತಿಯ ಆಳವನ್ನು ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ. ದೊರೆ ಲಿಯರ್ ಅವರನ್ನು ಪುರಸ್ಕರಿಸುತ್ತಾನೆ. ಆದರೆ ಕೊನೆಯ ಮಗಳು ಕಾರ್ಡಿಲೀಯಾ ತನ್ನ ಪ್ರೀತಿಯನ್ನು ಮಾತುಗಳಲ್ಲಿ ವ್ಯಕ್ತಪಡಿಸಲಾರದಷ್ಟು ಗಾಢವಾಗಿ ತಂದೆಯನ್ನು ಪ್ರೀತಿಸಿರುತ್ತಾಳೆ.

ಕಾರ್ಡಿಲೀಯಾಳ ಮಾತಿನ ಹಿಂದಿನ ಭಾವವನ್ನು ಗ್ರಹಿಸಲಾರದ ದೊರೆ ಅವಳನ್ನು ಶಪಿಸಿ ಪ್ರಾನ್ಸ್ ಗೆ ಅಟ್ಟುತ್ತಾನೆ. ಈ ನಿರ್ಧಾರ ಅವನ ಇಳಿವಯಸ್ಸಿನ ಅಸಹಾಯಕತೆ, ಹಪಹಪಿಕೆ, ಭ್ರಾಂತಿಗೆ ಕಾರಣವಾಗುತ್ತದೆ. ಇಲ್ಲಿ ಬೋಳೆತನ, ನಂಬಿಕೆ ದ್ರೋಹ, ಸಂಬಂಧಗಳ ಶಿಥಿಲತೆ, ಕುಟಿಲ ರಾಜಕಾರಣ ಎಲ್ಲವೂ ಇದೆ.

ಅನೈತಿಕ ಮಗ ಎಡ್ಮಂಡ್ ನ ಕುತಂತ್ರಕ್ಕೆ ಒಳಗಾಗುವ ಗ್ಲೂಸ್ಟರ್, ಒಳ್ಳೆಯತನದ ಪ್ರತೀಕವಾಗಿರುವ ಆತನ ಅಧಿಕೃತ ಪುತ್ರ ಎಡ್ಗರ್, ಲಿಯರ್ ನ ಹಿತೈಸಿ ಕೆಂಟ್ ಎಲ್ಲರೂ ಲಿಯರ್ ನ ಸುತ್ತ ಸುತ್ತುತ್ತಿರುತ್ತಾರೆ.
ಅನುವಾದಕರ ’ಕಿಂಗ್ ಲಿಯರ್’ ನಾಟಕವನ್ನು ನಿರ್ದೇಶಕರು ’ಡಿಯರ್ ಲಿಯರ್’ ಎಂದು ಕರೆದಿರುವುದೇ ಅವರು ನಾಟಕವನ್ನು ಆಪ್ತ ಮಟ್ಟದಲ್ಲಿ ನೋಡಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಂತಿತ್ತು. ಆದರೆ ’ಕಿಂಗ್ ಲಿಯರ್ ಉತ್ತಮ ಅನುವಾದವೇನೂ ಅಲ್ಲ. ಅದು ರಂಗ ಪ್ರಯೋಗದಲ್ಲೂ ಪ್ರತಿಫಲಿಸಿತ್ತು.

ನಾಟಕ ರಚನೆಕಾರನೊಬ್ಬನಿಗೆ ರಂಗಪ್ರಯೋಗದ ಬಗ್ಗೆಯೂ ಆಳ್ವಾದ ಜ್ನಾನವಿದ್ದಾಗ ಅತ್ಯುತ್ತಮ ನಾಟಕವೊಂದು ರೂಪ ಪಡೆಯುವುದು ಸಾಧ್ಯ. ಕಳೆದ ತಿಂಗಳು ಇದೇ ರವೀಂದ್ರ ಕಲಾಕ್ಷೇತ್ರದಲ್ಲಿ ಷೇಕ್ಸ್ ಪಿಯರನ ’ ಹ್ಯಾಮ್ಲೆಟ್’ ನಾಟಕ ಪ್ರದರ್ಶನಗೊಂಡಿತ್ತು. ಕನ್ನಡದ ಸ್ವಂತ ನಾಟಕವೆಂಬಷ್ಟು ಪರಿಪೂರ್ಣವಾಗಿ ಪುನರ್ ಸೃಷ್ಟಿಸಲ್ಪಟ್ಟ ಈ ನಾಟಕ ವರ್ಷದ ಅತ್ಯುತ್ತಮ ರಂಗ ಪ್ರಯೋಗ ಎಂದರೂ ತಪ್ಪಾಗಲಾರದು.

ಒಂದು ರಂಗಪ್ರಯೋಗದಲ್ಲಿ ಕೇಂದ್ರ ಪಾತ್ರಗಳಿರುವಷ್ಟೇ ಮಹತ್ವ ಒಬ್ಬ ಬಾಗಿಲು ಕಾಯುವ ಸೇವಕನ ಪಾತ್ರಕ್ಕೂ ಇರುತ್ತದೆ. ಕೇಂದ್ರ ಪಾತ್ರ ಸಮರ್ಥವಾಗಿ ಮೂಡಿ ಬಂದು ಚಿಕ್ಕಪುಟ್ಟ ಪಾತ್ರಗಳು ಲಯ ತಪ್ಪಿದರೆ ನಾಟಕದ ಒಟ್ಟು ಶಿಲ್ಪಕ್ಕೆ ಭಂಗ ಬರುತ್ತದೆ. ’ ಡಿಯರ್ ಲಿಯರ್’ ನಾಟಕದಲ್ಲಿ ಅಲ್ ಬೆನಿ, ಕಾರ್ನ್ ವಾಲ್ ವರ್ತನೆಗಳು, ಗ್ಲೂಸ್ಟರ್ ನ ಕಣ್ಣು ಕಿತ್ತಾಗ ಸೇವಕ ಆಡುವ ಸಾಂತ್ವನದ ಮಾಟುಗಳು-ಇವೆಲ್ಲಾ ಅವಸರದ ಮಾತು ಒಪ್ಪಿಸುವಿಕೆಯಂತಿದ್ದವು.
ನಾಟಕ ತೆರೆದುಕೊಂಡ ಅಸ್ಥಾನದ ಮೊದಲ ದೃಶ್ಯವೇ ಸಾಮಾನ್ಯವಾಗಿತ್ತು. ರಂಗದ ತುಂಬಾ ಹರಡಿಕೊಂಡಿರುವ ಪಾತ್ರಧಾರಿಗಳಲ್ಲಿ ಏಕಸೂತ್ರತೆಯಿರಲಿಲ್ಲ. ದೊರೆ ಲಿಯರನ ಐಲುತನ ಉಳಿದ ಪಾತ್ರಧಾರಿಗಳಲ್ಲಿ ಸಂಚಲನ ತರುತ್ತಿರಲಿಲ್ಲ. ಅಲ್ ಬೆನಿ ಮತ್ತು ಕಾರ್ನ್ ವಾಲ್ ನ ಉಡುಪುಗಳು ಉಳಿದ ಪಾತ್ರಧಾರಿಗಳ ವಸ್ತ್ರ ವಿನ್ಯಾಸಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಸೌಂಡ್ ಸಿಸ್ಟಂ ಸರಿಯಿರಲಿಲ್ಲ. ಉಚ್ಚಾರಣೆಯಲ್ಲಿ ಶುದ್ಧತೆ ಇರಲಿಲ್ಲ.

ಚಿತ್ರ ಕೃಪೆ; ಅಂತರ್ಜಾಲ
ಕಿಂಗ್ ಲಿಯರ್ ಆಗಿ ಜಯರಾಮ್ ತಾತಾಚಾರ್ ಚ್ನ್ನಾಗಿಯೇ ನಟಿಸಿದ್ದಾರೆ. ಎಡಂಡ್ ಆಗಿ ಮೋಹನ್ ರಾಜ್ ಅಭಿನಯವೂ ಪರವಾಗಿರಲಿಲ್ಲ. ಅವರ ಮಾತಿನ ಸ್ವರಭಾರ ಚಿನ್ನಾಗಿದ್ದರೂ ಅವರ ಕೆಲವು ಮ್ಯಾನರಿಸಂ [ಕೈ ಕೈ ಹೊಸೆಯುವುದು] ಅತಿ ಎನಿಸುತ್ತಿತ್ತು. ’ವೃದ್ಧರ ಪತನ; ತರುಣರ ಉತ್ಥಾನ ಯಾಃ’ ಎಂಬ ಉದ್ಘಾರದಿಂದ ನಾಟಕದ ಗಾಂಭೀರ್ಯಕ್ಕೆ ಧಕ್ಕೆ ಬರುತ್ತಿತ್ತು. ಎಡ್ಗರ್ ತಲೆ ಮರೆಸಿಕೊಂಡು ಹುಚ್ಚ ಟಾಂ ಆಗಿ ಪರಿವರ್ತನೆಯಾದ ಮೇಲೆ ಅವರ ಅಭಿನಯಕ್ಕೆ ಓಘ ಬಂದಿತ್ತು. ಕೈಯ್ಯಲ್ಲಿ ಕೋಲು; ಸೊಂಟಕ್ಕೆ ಸೆಣಬಿನ ನಾರು ಟಾಂ ಪಾತ್ರಕ್ಕೆ ಒಪ್ಪುತ್ತಿತ್ತು. ಕೆಂಟ್ ವೇಷ ಮರೆಸಿಕೊಂಡು ಕಯಸ್ ಆಗಿ ರಾಜನ ಸನಿಹದಲ್ಲೇ ಇದ್ದುಕೊಂಡು ಅವನ ಸಹವರ್ತಿಯಾಗಿರುವ ಪಾತ್ರದಲ್ಲಿ ಅಧ್ಯಾಪಕ್ ಅವರದು ಸಹಜ ಅಭಿನಯ.

ನಾಟಕದಲ್ಲಿ ಲಿಯರ್ ನ ಮೂವರು ಹೆಣ್ಣುಮಕ್ಕಳು ಮಾತ್ರ ಸ್ತ್ರೀ ಪಾತ್ರಗಳು. ಅವುಗಳಲ್ಲಿ ಸತ್ವವೇ ಇರಲಿಲ್ಲ. ಇದ್ದುದರಲ್ಲಿ ಕಾರ್ಡಿಲೀಯಾ ಅಗಿ ನಟಿಸಿದ ಸನ್ನುತ ಪರವಾಗಿಲ್ಲ. ಇನ್ನುಳಿದಂತೆ ನಿಯರ್ ದೊರೆಯ ವಿಮರ್ಶಕನಂತೆ ಬರುವ ವಿದೂಶಕನ ಪಾತ್ರದಲ್ಲಿ ಮುರಳಿ ಶೃಂಗೇರಿ ಚೆನ್ನಾಗಿಯೇ ಮಿಂಚಿದ್ದಾರೆ.
ಬಿಡಿಬಿಡಿಯಾಗಿ ಕೆಲವು ದೃಶ್ಯಗಳು ಚೆನ್ನಾಗಿದ್ದವು ’ ಜ್ನಾನಿಯ ಜೊತೆ ಮಾತಾಡಬೇಕು’ ಎಂದು ಲಿಯರ್ ಟಾಂ ಜೊತೆ ಸಂಭಾಷಿಸುವ ಸನ್ನಿವೇಶ, ಹಾಗೆಯೇ ಟಾಂ, ಕಯಸ್,ಲಿಯರ್ ಸೇರಿಕೊಂಡು ಲಿಯರ ದೊರೆಯ ಹೆಣ್ಣುಮಕ್ಕಳ ಬೊಂಬೆಗಳನ್ನಿಟ್ಟುಕೊಂಡು ವಿಚಾರಣೆ ನಡೆಸುವ ನ್ಯಾಯಾಲಯ ಸನ್ನಿವೇಶ ಉತ್ತಮವಾಗಿ ಮೂಡಿ ಬಂದಿವೆ. ನಾಟ್ಕದಲ್ಲಿ ಕೊಳಲು ನಾದ ಪರಿಣಾಮಕಾರಿಯಾಗಿತ್ತು. ವಿಷಾದಕ್ಕೆ ಶ್ರ್ರುತಿ ಹಿಡಿಯುತ್ತಿತ್ತು. ಆದರೆ ನಾಟಕದ ಒಟ್ಟು ಸಂಗೀತಕ್ಕೆ ಈ ಮಾತು ಹೇಳುವಂತಿರಲಿಲ್ಲ.

ತಿಂಗಳ ನಾಟಕ ಮಾಲಿಕೆಯಲ್ಲಿ ಮೊದಲ ಬಾರಿಗೆ ಷೇಕ್ಸ್ ಪಿಯರನ ನಾಟಕ ಪ್ರದರ್ಶನಗೊಂಡಿದೆ. ಅಕಾಡಮಿ ತನ್ನ ಇಪ್ಪತೈದನೇ ಪ್ರದರ್ಶನಕ್ಕೆ ಜಗತ್ತಿನ ಮೇರು ನಾಟಕಕಾರನಿಗೆ ಸಲ್ಲಿಸಿದ ಗೌರವ ಇದು. ನಾಟಕಕ್ಕೆ ಬಂದ ಪ್ರೇಕ್ಷಕರಿಗೆ ಲಾಡು ಹಂಚುವುದರ ಮುಖಾಂತರ ಅಕಾಡಮಿ ತನ್ನ ಸಂಭ್ರಮವನ್ನು ರಂಗಪ್ರೇಮಿಗಳಲ್ಲಿ ಹಂಚಿಕೊಂಡದ್ದು ಅರ್ಥಪೂರ್ಣವಾಗಿತ್ತು. ತಿಂಗಳ ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಕಲಾಕ್ಷೇತ್ರವೂ ಭರ್ತಿಯಾಗಿದ್ದು ವಿಶೇಷವಾಗಿತ್ತು.

[ ೨೦೦೪, ಮೇ ೬ ರಂದು ಉದಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ ] 

Tuesday, January 22, 2013

ಧರೆಗಿಳಿದ ಕಿನ್ನರಲೋಕ ”ಋಷ್ಯಮೂಕ’



ಅದೊಂದು ಕಪಿಗಳ ಲೋಕ. ಆ ಲೋಕದಲ್ಲಿ ಪ್ರೀತಿ, ಪ್ರೇಮ, ಅಕ್ಕರೆಯದೇ ರಾಜ್ಯಭಾರ. ಅಲ್ಲಿ ಅಳುವಿಗೆ ಜಾಗವಿಲ್ಲ. ಅಲ್ಲಿಗೆ ಅರಿಷಡ್ವೈರಿಗಳ ಪ್ರವೇಶವಾಗುತ್ತದೆ. ಆ ಮುಗ್ಧಲೋಕ ಮಲೀನವಾಗುತ್ತದೆ.ಮಾತಿನ ಕಲರವ ಅಡಗಿ ಹೋಗುತ್ತದೆ. ಮೌನ ಮನೆ ಮಾಡುತ್ತದೆ. ಮುಂದೆ ಆ ಲೋಕ ನಿಷ್ಕಾಮ ಪ್ರೀತಿಯನ್ನು, ಮಾತಿನ ಸಂಭ್ರಮವನ್ನು ಮರಳಿ ಪಡೆಯುತ್ತದೆಯೇ? ಅದನ್ನು ನೋಡಬೇಕಾದರೆ ವಿಜಯನಗರ ಬಿಂಬದ ಮಕ್ಕಳು ಅಭಿನಯಿಸಿದ್ದ ’ಋಷ್ಯಮೂಕ’ ನಾಟಕವನ್ನು ನೋಡಬೇಕು.

ಋಷ್ಯಮೂಕ ಪರ್ವತದ ಬಗ್ಗೆ ನಮಗೆ ಗೊತ್ತಿದೆ. ಅದು ಮತಂಗ ಮುನಿಯ ತಪೋಭೂಮಿಯಾಗಿತ್ತು ಎಂದು ರಾಮಾಯಣ್ದಲ್ಲಿ ಉಲ್ಲೇಖವಿದೆ. ಅಲ್ಲಿ ಸುಗ್ರೀವ ವಾಸವಾಗಿದ್ದ. ಇದು ಈಗಿನ ಬಳ್ಳಾರಿ ಜಿಲ್ಲೆಯ ಆನೆಗುಂದಿಯ ಸಮೀಪ ತುಂಗಾಭದ್ರೆಯ ಸಮೀಪವಿದೆ. ಇಲ್ಲಿಯೇ ಶ್ರಿರಾಮ ವಾಲಿ-ಸುಗ್ರೀವರನ್ನು ಭೇಟಿ ಮಾಡಿದ್ದು ಎಂಬುದು ಪುರಾಣ ನಂಬಿಕೆ. ಹಾಗೆ ಬಂದ ಶ್ರೀರಾಮ ಇಲ್ಲಿನ ಕಪಿ ಸಮೂಹಕ್ಕೆ ಒಂದು ಅಮೂಲ್ಯ ಮಣಿಯನ್ನು ಕೊಟ್ಟ; ಅದು ಪ್ರೀತಿಯ ಸಂಕೇತ. ಈ ಕಲ್ಪನೆಯ ಕಥಾ ಹಂದರವನ್ನಿಟ್ಟುಕೊಂಡು  ಡಾ. ಕಶ್ಯಪ್ ”ಋಷ್ಯಮೂಕ’ ಎಂಬ ನಾಟಕವನ್ನು ಹೆಣೆದಿದ್ದಾರೆ.
ಕಶ್ಯಪ್ ಈ ನಾಟಕವನ್ನು ಬರೆಯಲು ಕಾರಣವಿತ್ತು;  ವಿಜಯನಗರ ಬಿಂಬ ಪ್ರತಿವರ್ಷ ಮಕ್ಕಳಿಗಾಗಿಯೇ ಆರುತಿಂಗಳ ರಂಗ ತರಬೇತಿ ಶಿಭಿರವನ್ನು ಆಯೋಜಿಸುತ್ತಿದೆ. ತರಬೇತಿಯ ಅಂತ್ಯದಲ್ಲಿ ಮಕ್ಕಳಿಂದಲೇ ಮೇಜರ್ ನಾಟಕವೊಂದನ್ನು ಆಡಿಸುತ್ತಿದೆ. ಈ ಬಾರಿ ತರಬೇತಿ ಪಡೆಯುತ್ತಿದ್ದ ಮಕ್ಕಳ ಸಂಖ್ಯೆ ಎಪ್ಪತ್ತು. ಹಾಗಾಗಿಯೇ ಎಲ್ಲಾ ಮಕ್ಕಳನ್ನು ರಂಗದ ಮೇಲೆ ತರುವ ಉದ್ದೇಶದಿಂದಲೇ ಹುಟ್ಟಿಕೊಂಡದ್ದು ಋಷ್ಯಮೂಖ’ ನಾಟಕ.

ನಾಟ್ಕ ತೆರೆದುಕೊಳ್ಳುವುದೇ
’ ’ಹೆಸರಿಗಷ್ಟೇ ಮೂಕ.. ವಾನರರಲೋಕ;
 ಪ್ರೀತಿ, ಪ್ರೇಮ, ಒಲವು, ಗೆಲುವು ಎಲ್ಲವೂ ಇರುವ ನಾಕ’
ಎಂಬ ಹಾಡನ್ನು ಕಪಿಗಳು ಹಾಡುವುದರ ಮೂಲಕ.  ಎಪ್ಪತ್ತು ಮಕ್ಕಳನ್ನು ಒಂದೂಕಾಲು ಘಂಟೆಗಳ ಕಾಲ ರಂಗದ ಮೇಲೆ ಹಿಡಿದಿಡುವುದು ತುಂಬಾ ಜವಾಬ್ದಾರಿಯನ್ನು ಬೇಡುವ ಮತ್ತು ಕಷ್ಟಕರವಾದ ಕೆಲಸ. ಹಾಗಾಗಿ ಸಂಭಾಷಣೆಯ ಜೊತೆಗೆ ಹಾಡುಗಳ ಮುಖಾಂತರ ಕಥೆ ಹೇಳುವುದು ಎಲ್ಲರೂ ಅನುಸರಿಸುವ ಸಾಮಾನ್ಯ ಟೆಕ್ನಿಕ್. ಸಂಭಾಷಣೆ ಬಿದ್ದಾಗ ಹಾಡುಗಳು ನಾಟಕವನ್ನು ಮೇಲೆತ್ತುತ್ತದೆ. ಆದರೆ ಇಲ್ಲಿ ಸಂಭಾಷಣೆ, ಅಭಿನಯ, ಹಾಡು,ಸಂಗೀತ, ವಸ್ತ್ರ ಮತ್ತು ಬೆಳಕಿನ ವಿನ್ಯಾಸ, ನಾಟಕದ ಆಶಯ ಒಂದಕ್ಕೊಂದು ಹೇಗೆ ಮೇಳೈಸಿಕೊಂಡಿತ್ತೆಂದರೆ ಅದು ಮಕ್ಕಳ ನಾಟಕ ಎಂಬ ಮಿತಿಯನ್ನು ಮೀರಿ ದೊಡ್ಡವರಿಗೆ ಪಾಠದಂತಿತ್ತು.

ಒಂದೂಕಾಲು ಘಂಟೆಯ ಈ ನಾಟಕದಲ್ಲಿ ಒಟ್ಟು ಏಳು ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಮಕ್ಕಳು ಕಯ್ಯಲ್ಲಿ ಎರಡು ಕಲ್ಲುಗಳನ್ನು ಹಿಡಿದುಕೊಂಡಂತೆ ಅಭಿನಯಿಸಿ ಬೆಂಕಿಯನ್ನು ಹುಟ್ಟಿಸುವ ’ಕಯ್ಯಲ್ಲಿ ಕಲ್ಲು ಎರಡು,ಎದುರಿಗೆ ಮರದ ಕೊರಡು...ಫಟ್..ಫಟ್...’ ಎನ್ನುವ ಹಾಡು ಮಕ್ಕಳಲ್ಲಿ ತುಂಬಿರುವ ಎನರ್ಜಿಯನ್ನು ಬಿಂಬಿಸುವಂತಿತ್ತು.ಹಾಡುಗಳನ್ನೆಲ್ಲಾ ಕಶ್ಯಪರೇ ರಚಿಸಿದ್ದಾರೆ. ಕಶ್ಯಪ್ ರವರ ಕಲ್ಪನೆಗೆ ನಿರ್ದೇಶಕಿ ಎಸ್.ವಿ.ಸುಷ್ಮ ಜೀವ ತುಂಬಿದ್ದಾರೆ. ಆಕೆ ಸ್ವತಃ ಕೊರಿಯೋಗ್ರಾಪರ್ ಕೂಡಾ ಆಗಿರುವುದು ನಾಟಕದ ಸಲೀಲ ಚಲನೆಗೆ ಸಹಾಯಕವಾಗಿತ್ತು. ಕಪಿಗಳನ್ನು ಶಿಸ್ತಿಗೆ ಒಳಪಡಿಸುವುದು ಕಷ್ಟದ ಕೆಲಸವಲ್ಲವೇ? ಎಂದು ತುಂಟತನದ ಪ್ರಶ್ನೆಯನ್ನು ಆಕೆಯ ಮುಂದಿಟ್ಟರೆ ಆಕೆ ತನ್ನ ಎಂದಿನ ಉತ್ಸಾಹದಲ್ಲಿ ಹೇಳಿದ್ದು ಹೀಗೆ; ಹೌದು ಬ್ಲಾಕಿಂಗ್ ಮಾಡುವುದು, ಸ್ಟೇಜ್ ಬ್ಯಾಲೆನ್ಸ್ ಮಾಡುವುದು..ಇದೆಲ್ಲಾ ನಂಗೆ ಚಾಲೆಂಜಿಂಗ್ ಆಗಿತ್ತು’ ಎಂದು ಹುಬ್ಬು ಹಾರಿಸಿದ್ರು.
Add caption

ಆ ನಾಟ್ಕದ ಗಂಭೀರ ವಸ್ತು ಆ ಪುಟ್ಟ ಮಕ್ಕಳಿಗೆ ಎಷ್ಟು ಅರ್ಥ ಆಯ್ತೋ ಅದು ಗೊತ್ತಿಲ್ಲ. ಆದರೆ ಆ ಚಿಣ್ಣರು ಪ್ರದರ್ಶಿಸಿದ ರಂಗಶಿಸ್ತು, ರಂಗ ಸಮತೋಲನ, ಸ್ಫುಟವಾದ ಡೈಲಾಗ್ ಡೆಲಿವರಿ ದೊಡ್ಡವರನ್ನೂ ನಾಚಿಸುವಂತಿತ್ತು. ನಾಟಕದಲ್ಲಿ ಹಲವು ಪ್ರತಿಮೆಗಳು, ರೂಪಕಗಳು ತುಂಬಿದ್ದವು. ಹಂಸ ಜ್ನಾನವನ್ನು ಪ್ರತಿಬಿಂಬಿಸಿದರೆ, ಮಣಿ ಪ್ರೀತಿಯನ್ನು ಸಂಕೇತಿಸುತ್ತಿತ್ತು. ಅರಿಷಡ್ವೈರಿಗಳು ಮನುಷ್ಯನಲ್ಲಿರುವ ಸ್ವಾರ್ಥ ಲಾಲಸೆಯನ್ನು ಬಿಂಬಿಸುತ್ತಿದ್ದವು.
ನಾಟಕದುದ್ದಕ್ಕೂ ಜಿಜ್ನಾಸೆ ನಡೆಯುತ್ತಿದ್ದುದು ತಮಗೆ ಜ್ನಾನ ಬೇಕೋ? ಪ್ರೀತಿ ಬೇಕೋ ಎಂಬುದರ ಬಗ್ಗೆ..ಕೊನೆಗೆ ಪ್ರೀತಿಗೇ ಗೆಲುವಾಗುತ್ತದೆ.
ಈ ನಾಟಕಕ್ಕೆ ವಸ್ತ್ರವಿನ್ಯಾಸ ಮಾಡಿದವರು; ಶೋಭಾ ವೆಂಕಟೇಶ್, ರಂಗಸಜ್ಜಿಕೆ ಮತ್ತು ಪ್ರಸಾದನ ಮಾಲತೇಶ್ ಬಡಿಗೇರ್; ಬೆಳಕು ಏ.ಕೆ.ಕ್ರುಷ್ಣಯ್ಯ, ಸಂಗೀತ ರಾಜಗುರು ಹೊಸಕೋಟೆ. ಮಕ್ಕಳ ಈ ನಾಟಕವನ್ನು ಕಣ್ತುಂಬಿಸಿಕೊಳ್ಳಲು ಅತಿಥಿಗಳಾಗಿ ಬಂದವರು ಹಿರಿಯ ನಾಟಕಕಾರರೂ, ಬರಹಗಾರರೂ ಆದ ಗೋಪಾಲ ವಾಜಪೇಯಿ, ಶಿಕ್ಷಣ ತಜ್ನರಾದ ಗೀತಾ ರಾಮಾನುಜಂ, ಹಿರಿಯ ರಂಗವಿಮರ್ಶಕಿ ವಿಜಯಮ್ಮ, ಹಾಗೂ ದೂರದ ಧಾರವಾಡದಿಂದ ಆಗಮಿಸಿದ ಬರಹಗಾರ ಹಾಗು ಬಾಲ ವಿಕಾಸ ಅಕಾಡಮಿಯ ರಾಜ್ಯ ಸದಸ್ಯರಾದ ಪ್ರದೀಪ್ ಭೂಸನೂರಮಠ್ ಅವರು.
Add caption

ನಾಟಕ ಕೊನೆಯಾಗುವುದು ಈ ಹಾಡಿನಲ್ಲಿ;
ಪ್ರೀತಿ ,ಪ್ರೇಮ, ಅಕ್ಕರೆ, ಎಣಿಕೆಗೆ ಸಿಗದು ಮಾನ್ಯರೇ..
ಅರ್ಷಡ್ವರ್ಗಕ್ಕೆ ಸೋಲಾಯ್ತು.
ನರವಾನರರಿಗೆಲ್ಲಾ ಗೆಲುವಾಯ್ತು.
ಅಕ್ಕರೆಗಿಲ್ಲಿ ನೆಲೆಯಾಯ್ತು.
ಮಾತು ನಮ್ಮಯ ಪಾಲಾಯ್ತು.
ಋಷ್ಯಮೂಕವೀಗ ನಮ್ಮಯ ನಾಕ..’
ಅರಿಷಡ್ವೈರಿಗಳಿಗೆ ಪಕ್ಕಾಗದ ಪ್ರೀತಿ, ಪ್ರೇಮ, ಅಕ್ಕರೆಗಳೇ ಇರುವ  ಲೋಕವೊಂದನ್ನು”ಋಷ್ಯಮೂಕ’ ನಾಟಕ ಕಟ್ಟಿಕೊಟ್ಟಿದೆ. ಅಂತಹ ಲೋಕವೊಂದು ನಮ್ಮನ್ನೂ ಸೇರಿದಂತೆ ನಮ್ಮ ಮಕ್ಕಳಿಗೆಲ್ಲಾ ಸಿಗುವಂತಾದರೆ ಎಷ್ಟು ಚೆನ್ನ ಅಲ್ಲವೇ?

[ ವಿಜಯವಾಣಿಯ ’ವಿದ್ಯಾರ್ಥಿ ಮಿತ್ರ’ ದಲ್ಲಿ ಪ್ರಕಟವಾದ ಬರಹ ]