Total Pageviews

Tuesday, January 22, 2013

ಧರೆಗಿಳಿದ ಕಿನ್ನರಲೋಕ ”ಋಷ್ಯಮೂಕ’



ಅದೊಂದು ಕಪಿಗಳ ಲೋಕ. ಆ ಲೋಕದಲ್ಲಿ ಪ್ರೀತಿ, ಪ್ರೇಮ, ಅಕ್ಕರೆಯದೇ ರಾಜ್ಯಭಾರ. ಅಲ್ಲಿ ಅಳುವಿಗೆ ಜಾಗವಿಲ್ಲ. ಅಲ್ಲಿಗೆ ಅರಿಷಡ್ವೈರಿಗಳ ಪ್ರವೇಶವಾಗುತ್ತದೆ. ಆ ಮುಗ್ಧಲೋಕ ಮಲೀನವಾಗುತ್ತದೆ.ಮಾತಿನ ಕಲರವ ಅಡಗಿ ಹೋಗುತ್ತದೆ. ಮೌನ ಮನೆ ಮಾಡುತ್ತದೆ. ಮುಂದೆ ಆ ಲೋಕ ನಿಷ್ಕಾಮ ಪ್ರೀತಿಯನ್ನು, ಮಾತಿನ ಸಂಭ್ರಮವನ್ನು ಮರಳಿ ಪಡೆಯುತ್ತದೆಯೇ? ಅದನ್ನು ನೋಡಬೇಕಾದರೆ ವಿಜಯನಗರ ಬಿಂಬದ ಮಕ್ಕಳು ಅಭಿನಯಿಸಿದ್ದ ’ಋಷ್ಯಮೂಕ’ ನಾಟಕವನ್ನು ನೋಡಬೇಕು.

ಋಷ್ಯಮೂಕ ಪರ್ವತದ ಬಗ್ಗೆ ನಮಗೆ ಗೊತ್ತಿದೆ. ಅದು ಮತಂಗ ಮುನಿಯ ತಪೋಭೂಮಿಯಾಗಿತ್ತು ಎಂದು ರಾಮಾಯಣ್ದಲ್ಲಿ ಉಲ್ಲೇಖವಿದೆ. ಅಲ್ಲಿ ಸುಗ್ರೀವ ವಾಸವಾಗಿದ್ದ. ಇದು ಈಗಿನ ಬಳ್ಳಾರಿ ಜಿಲ್ಲೆಯ ಆನೆಗುಂದಿಯ ಸಮೀಪ ತುಂಗಾಭದ್ರೆಯ ಸಮೀಪವಿದೆ. ಇಲ್ಲಿಯೇ ಶ್ರಿರಾಮ ವಾಲಿ-ಸುಗ್ರೀವರನ್ನು ಭೇಟಿ ಮಾಡಿದ್ದು ಎಂಬುದು ಪುರಾಣ ನಂಬಿಕೆ. ಹಾಗೆ ಬಂದ ಶ್ರೀರಾಮ ಇಲ್ಲಿನ ಕಪಿ ಸಮೂಹಕ್ಕೆ ಒಂದು ಅಮೂಲ್ಯ ಮಣಿಯನ್ನು ಕೊಟ್ಟ; ಅದು ಪ್ರೀತಿಯ ಸಂಕೇತ. ಈ ಕಲ್ಪನೆಯ ಕಥಾ ಹಂದರವನ್ನಿಟ್ಟುಕೊಂಡು  ಡಾ. ಕಶ್ಯಪ್ ”ಋಷ್ಯಮೂಕ’ ಎಂಬ ನಾಟಕವನ್ನು ಹೆಣೆದಿದ್ದಾರೆ.
ಕಶ್ಯಪ್ ಈ ನಾಟಕವನ್ನು ಬರೆಯಲು ಕಾರಣವಿತ್ತು;  ವಿಜಯನಗರ ಬಿಂಬ ಪ್ರತಿವರ್ಷ ಮಕ್ಕಳಿಗಾಗಿಯೇ ಆರುತಿಂಗಳ ರಂಗ ತರಬೇತಿ ಶಿಭಿರವನ್ನು ಆಯೋಜಿಸುತ್ತಿದೆ. ತರಬೇತಿಯ ಅಂತ್ಯದಲ್ಲಿ ಮಕ್ಕಳಿಂದಲೇ ಮೇಜರ್ ನಾಟಕವೊಂದನ್ನು ಆಡಿಸುತ್ತಿದೆ. ಈ ಬಾರಿ ತರಬೇತಿ ಪಡೆಯುತ್ತಿದ್ದ ಮಕ್ಕಳ ಸಂಖ್ಯೆ ಎಪ್ಪತ್ತು. ಹಾಗಾಗಿಯೇ ಎಲ್ಲಾ ಮಕ್ಕಳನ್ನು ರಂಗದ ಮೇಲೆ ತರುವ ಉದ್ದೇಶದಿಂದಲೇ ಹುಟ್ಟಿಕೊಂಡದ್ದು ಋಷ್ಯಮೂಖ’ ನಾಟಕ.

ನಾಟ್ಕ ತೆರೆದುಕೊಳ್ಳುವುದೇ
’ ’ಹೆಸರಿಗಷ್ಟೇ ಮೂಕ.. ವಾನರರಲೋಕ;
 ಪ್ರೀತಿ, ಪ್ರೇಮ, ಒಲವು, ಗೆಲುವು ಎಲ್ಲವೂ ಇರುವ ನಾಕ’
ಎಂಬ ಹಾಡನ್ನು ಕಪಿಗಳು ಹಾಡುವುದರ ಮೂಲಕ.  ಎಪ್ಪತ್ತು ಮಕ್ಕಳನ್ನು ಒಂದೂಕಾಲು ಘಂಟೆಗಳ ಕಾಲ ರಂಗದ ಮೇಲೆ ಹಿಡಿದಿಡುವುದು ತುಂಬಾ ಜವಾಬ್ದಾರಿಯನ್ನು ಬೇಡುವ ಮತ್ತು ಕಷ್ಟಕರವಾದ ಕೆಲಸ. ಹಾಗಾಗಿ ಸಂಭಾಷಣೆಯ ಜೊತೆಗೆ ಹಾಡುಗಳ ಮುಖಾಂತರ ಕಥೆ ಹೇಳುವುದು ಎಲ್ಲರೂ ಅನುಸರಿಸುವ ಸಾಮಾನ್ಯ ಟೆಕ್ನಿಕ್. ಸಂಭಾಷಣೆ ಬಿದ್ದಾಗ ಹಾಡುಗಳು ನಾಟಕವನ್ನು ಮೇಲೆತ್ತುತ್ತದೆ. ಆದರೆ ಇಲ್ಲಿ ಸಂಭಾಷಣೆ, ಅಭಿನಯ, ಹಾಡು,ಸಂಗೀತ, ವಸ್ತ್ರ ಮತ್ತು ಬೆಳಕಿನ ವಿನ್ಯಾಸ, ನಾಟಕದ ಆಶಯ ಒಂದಕ್ಕೊಂದು ಹೇಗೆ ಮೇಳೈಸಿಕೊಂಡಿತ್ತೆಂದರೆ ಅದು ಮಕ್ಕಳ ನಾಟಕ ಎಂಬ ಮಿತಿಯನ್ನು ಮೀರಿ ದೊಡ್ಡವರಿಗೆ ಪಾಠದಂತಿತ್ತು.

ಒಂದೂಕಾಲು ಘಂಟೆಯ ಈ ನಾಟಕದಲ್ಲಿ ಒಟ್ಟು ಏಳು ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಮಕ್ಕಳು ಕಯ್ಯಲ್ಲಿ ಎರಡು ಕಲ್ಲುಗಳನ್ನು ಹಿಡಿದುಕೊಂಡಂತೆ ಅಭಿನಯಿಸಿ ಬೆಂಕಿಯನ್ನು ಹುಟ್ಟಿಸುವ ’ಕಯ್ಯಲ್ಲಿ ಕಲ್ಲು ಎರಡು,ಎದುರಿಗೆ ಮರದ ಕೊರಡು...ಫಟ್..ಫಟ್...’ ಎನ್ನುವ ಹಾಡು ಮಕ್ಕಳಲ್ಲಿ ತುಂಬಿರುವ ಎನರ್ಜಿಯನ್ನು ಬಿಂಬಿಸುವಂತಿತ್ತು.ಹಾಡುಗಳನ್ನೆಲ್ಲಾ ಕಶ್ಯಪರೇ ರಚಿಸಿದ್ದಾರೆ. ಕಶ್ಯಪ್ ರವರ ಕಲ್ಪನೆಗೆ ನಿರ್ದೇಶಕಿ ಎಸ್.ವಿ.ಸುಷ್ಮ ಜೀವ ತುಂಬಿದ್ದಾರೆ. ಆಕೆ ಸ್ವತಃ ಕೊರಿಯೋಗ್ರಾಪರ್ ಕೂಡಾ ಆಗಿರುವುದು ನಾಟಕದ ಸಲೀಲ ಚಲನೆಗೆ ಸಹಾಯಕವಾಗಿತ್ತು. ಕಪಿಗಳನ್ನು ಶಿಸ್ತಿಗೆ ಒಳಪಡಿಸುವುದು ಕಷ್ಟದ ಕೆಲಸವಲ್ಲವೇ? ಎಂದು ತುಂಟತನದ ಪ್ರಶ್ನೆಯನ್ನು ಆಕೆಯ ಮುಂದಿಟ್ಟರೆ ಆಕೆ ತನ್ನ ಎಂದಿನ ಉತ್ಸಾಹದಲ್ಲಿ ಹೇಳಿದ್ದು ಹೀಗೆ; ಹೌದು ಬ್ಲಾಕಿಂಗ್ ಮಾಡುವುದು, ಸ್ಟೇಜ್ ಬ್ಯಾಲೆನ್ಸ್ ಮಾಡುವುದು..ಇದೆಲ್ಲಾ ನಂಗೆ ಚಾಲೆಂಜಿಂಗ್ ಆಗಿತ್ತು’ ಎಂದು ಹುಬ್ಬು ಹಾರಿಸಿದ್ರು.
Add caption

ಆ ನಾಟ್ಕದ ಗಂಭೀರ ವಸ್ತು ಆ ಪುಟ್ಟ ಮಕ್ಕಳಿಗೆ ಎಷ್ಟು ಅರ್ಥ ಆಯ್ತೋ ಅದು ಗೊತ್ತಿಲ್ಲ. ಆದರೆ ಆ ಚಿಣ್ಣರು ಪ್ರದರ್ಶಿಸಿದ ರಂಗಶಿಸ್ತು, ರಂಗ ಸಮತೋಲನ, ಸ್ಫುಟವಾದ ಡೈಲಾಗ್ ಡೆಲಿವರಿ ದೊಡ್ಡವರನ್ನೂ ನಾಚಿಸುವಂತಿತ್ತು. ನಾಟಕದಲ್ಲಿ ಹಲವು ಪ್ರತಿಮೆಗಳು, ರೂಪಕಗಳು ತುಂಬಿದ್ದವು. ಹಂಸ ಜ್ನಾನವನ್ನು ಪ್ರತಿಬಿಂಬಿಸಿದರೆ, ಮಣಿ ಪ್ರೀತಿಯನ್ನು ಸಂಕೇತಿಸುತ್ತಿತ್ತು. ಅರಿಷಡ್ವೈರಿಗಳು ಮನುಷ್ಯನಲ್ಲಿರುವ ಸ್ವಾರ್ಥ ಲಾಲಸೆಯನ್ನು ಬಿಂಬಿಸುತ್ತಿದ್ದವು.
ನಾಟಕದುದ್ದಕ್ಕೂ ಜಿಜ್ನಾಸೆ ನಡೆಯುತ್ತಿದ್ದುದು ತಮಗೆ ಜ್ನಾನ ಬೇಕೋ? ಪ್ರೀತಿ ಬೇಕೋ ಎಂಬುದರ ಬಗ್ಗೆ..ಕೊನೆಗೆ ಪ್ರೀತಿಗೇ ಗೆಲುವಾಗುತ್ತದೆ.
ಈ ನಾಟಕಕ್ಕೆ ವಸ್ತ್ರವಿನ್ಯಾಸ ಮಾಡಿದವರು; ಶೋಭಾ ವೆಂಕಟೇಶ್, ರಂಗಸಜ್ಜಿಕೆ ಮತ್ತು ಪ್ರಸಾದನ ಮಾಲತೇಶ್ ಬಡಿಗೇರ್; ಬೆಳಕು ಏ.ಕೆ.ಕ್ರುಷ್ಣಯ್ಯ, ಸಂಗೀತ ರಾಜಗುರು ಹೊಸಕೋಟೆ. ಮಕ್ಕಳ ಈ ನಾಟಕವನ್ನು ಕಣ್ತುಂಬಿಸಿಕೊಳ್ಳಲು ಅತಿಥಿಗಳಾಗಿ ಬಂದವರು ಹಿರಿಯ ನಾಟಕಕಾರರೂ, ಬರಹಗಾರರೂ ಆದ ಗೋಪಾಲ ವಾಜಪೇಯಿ, ಶಿಕ್ಷಣ ತಜ್ನರಾದ ಗೀತಾ ರಾಮಾನುಜಂ, ಹಿರಿಯ ರಂಗವಿಮರ್ಶಕಿ ವಿಜಯಮ್ಮ, ಹಾಗೂ ದೂರದ ಧಾರವಾಡದಿಂದ ಆಗಮಿಸಿದ ಬರಹಗಾರ ಹಾಗು ಬಾಲ ವಿಕಾಸ ಅಕಾಡಮಿಯ ರಾಜ್ಯ ಸದಸ್ಯರಾದ ಪ್ರದೀಪ್ ಭೂಸನೂರಮಠ್ ಅವರು.
Add caption

ನಾಟಕ ಕೊನೆಯಾಗುವುದು ಈ ಹಾಡಿನಲ್ಲಿ;
ಪ್ರೀತಿ ,ಪ್ರೇಮ, ಅಕ್ಕರೆ, ಎಣಿಕೆಗೆ ಸಿಗದು ಮಾನ್ಯರೇ..
ಅರ್ಷಡ್ವರ್ಗಕ್ಕೆ ಸೋಲಾಯ್ತು.
ನರವಾನರರಿಗೆಲ್ಲಾ ಗೆಲುವಾಯ್ತು.
ಅಕ್ಕರೆಗಿಲ್ಲಿ ನೆಲೆಯಾಯ್ತು.
ಮಾತು ನಮ್ಮಯ ಪಾಲಾಯ್ತು.
ಋಷ್ಯಮೂಕವೀಗ ನಮ್ಮಯ ನಾಕ..’
ಅರಿಷಡ್ವೈರಿಗಳಿಗೆ ಪಕ್ಕಾಗದ ಪ್ರೀತಿ, ಪ್ರೇಮ, ಅಕ್ಕರೆಗಳೇ ಇರುವ  ಲೋಕವೊಂದನ್ನು”ಋಷ್ಯಮೂಕ’ ನಾಟಕ ಕಟ್ಟಿಕೊಟ್ಟಿದೆ. ಅಂತಹ ಲೋಕವೊಂದು ನಮ್ಮನ್ನೂ ಸೇರಿದಂತೆ ನಮ್ಮ ಮಕ್ಕಳಿಗೆಲ್ಲಾ ಸಿಗುವಂತಾದರೆ ಎಷ್ಟು ಚೆನ್ನ ಅಲ್ಲವೇ?

[ ವಿಜಯವಾಣಿಯ ’ವಿದ್ಯಾರ್ಥಿ ಮಿತ್ರ’ ದಲ್ಲಿ ಪ್ರಕಟವಾದ ಬರಹ ]


1 comment:

  1. ಕಣ್ಣಿಗೆ ಕಟ್ಟುವಂತಹ ಸುಂದರ ವರದಿ!

    ReplyDelete